ಬನ್ನೂರು ಕೆ. ರಾಜು ಮೂಲತಃ ಕಥೆಗಾರರಾದ ಇವರು ಕವಿ, ವಿಮರ್ಶಕ, ನಾಟಕಕಾರ, ಅಂಕಣಕಾರ, ಸಾಹಿತಿ. ಬನ್ನೂರು ಕೆ. ರಾಜು ಅವರು ಸಾಹಿತ್ಯ ಕೃಷಿಯನ್ನೇ ವೃತ್ತಿಯನ್ನಾಗಿಸಿಕೊಂಡು, ಬರಹವನ್ನೇ ಬದುಕಾಗಿಸಿಕೊಂಡು ಬರೆದೇ ಬದುಕುತ್ತಿರುವ ಅಕ್ಷರ ಸ್ನೇಹಿ. ಬರವಣಿಗೆಯಲ್ಲೇ ಜೀವಿಸುತ್ತಿರುವ ಅಕ್ಷರ ತಪಸ್ವಿ. ಇವತ್ತಿಗೂ ಇವರಿಗೆ ಬರವಣಿಗೆ ಬಿಟ್ಟರೆ ಮತ್ತೊಂದು ಉದ್ಯೋಗವೆಂಬುದು ಇಲ್ಲವೇ ಇಲ್ಲ. ಬರವಣಿಗೆಯೇ ಎಲ್ಲ !ಇವರು ಇದುವರೆಗೆ ಸುಮಾರು 5 ಸಾವಿರಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ. ಇವತ್ತಿಗೂ ಬರೆಯುತ್ತಲೇ ಇದ್ದಾರೆ. == ಜನನ/ಜೀವನ == ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲ್ಲೂಕಿನ ಬನ್ನೂರಿನಲ್ಲಿ 1964 ಏಪ್ರಿಲ್ 19ರಂದು ಸುಸಂಸ್ಕೃತ ಕೃಷಿಕ ಕುಟುಂಬದ ಕೆಂಪೇಗೌಡ ಮತ್ತು ಕೆಂಪಮ್ಮ ದಂಪತಿಗಳ ಪುತ್ರರಾಗಿ ಜನಿಸಿದರು. ಹುಟ್ಟಿದ ಊರಿನಲ್ಲೇ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಣವನ್ನು ಮುಗಿಸಿ, ಕಾಲೇಜು ವಿದ್ಯಾಭ್ಯಾಸವನ್ನು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಅಭ್ಯಾಸಿಸಿ ಬಿ.ಎ ಪದವಿ ತನಕ ವ್ಯಾಸಂಗ ಮಾಡಿದರೂ ಸಾಹಿತ್ಯದ ಗೀಳಿಗೆ ಬಿದ್ದ ಇವರು ಮುಂದೆ ವಿದ್ಯಾಭ್ಯಾಸವನ್ನು ಮುಂದುವರಿಸದೆ ಬರವಣಿಗೆಯ ಹಾದಿಯಲ್ಲಿ ಮುಂದುವರಿದರು. == ಸಾಹಿತ್ಯಾಸಕ್ತಿ == 'ಕಾಡಿನಲ್ಲಿ ಕನ್ಯೆಯರು' ಎಂಬ ಪತ್ತೇದಾರಿ ಕಾದಂಬರಿಯ ಮೂಲಕ ಮೊದಲಿಗೆ ಕನ್ನಡ ಸಾರಸ್ವತ ಲೋಕಕ್ಕೆ ಹೆಜ್ಜೆಯಿರಿಸಿದ ಬನ್ನೂರು ರಾಜು ಪತ್ತೇದಾರಿ ಕಾದಂಬರಿಗಳ ಸುಗ್ಗಿಕಾಲವೇ ಆಗಿದ್ದ ಎಪ್ಪತ್ತು ಎಂಭತ್ತರ ದಶಕದಲ್ಲಿ ಒಮ್ಮೆಗೇ 25 ಪತ್ತೇದಾರಿ ಕಿರು ಕಾದಂಬರಿಗಳನ್ನು (ಪಾಕೆಟ್ ನಾವೆಲ್) ಬರೆದು ಪ್ರಕಟಿಸಿದ್ದ ಹೆಗ್ಗಳಿಕೆ ಹೊಂದಿದವರು. ಇದುವರೆಗೆ ಕಥೆ, ಕಾದಂಬರಿ, ಕಾವ್ಯ, ನಾಟಕ, ವಿಮರ್ಶೆ, ನುಡಿಚಿತ್ರ, ಸಂಪಾದನೆ, ಸಂಶೋಧನೆ, ವಚನ, ಅಂಕಣಬರಹ ಸೇರಿದಂತೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ 50ಕ್ಕೂ ಹೆಚ್ಚು ಕೃತಿಗಳು ಹೊರ ಬಂದಿವೆ. == ಬರೆದ ಪತ್ರಿಕೆಗಳು == ಆಡು ಮುಟ್ಟದ ಸೊಪ್ಪಿಲ್ಲವೆಂಬಂತೆ ಬನ್ನೂರು ರಾಜು ಲೇಖನಿ ಆಡಿಸದ ಬರವಣಿಗೆಯೇ ಇಲ್ಲವೇನೋ ಎಂಬಂತೆ ಇವರ ಲೇಖನಿ ವೈವಿಧ್ಯಮಯ. ಬರವಣಿಗೆಯನ್ನು ಉಸಿರಿನಷ್ಟೇ ಸರಾಗ ಮಾಡಿಕೊಂಡಿರುವ ಬನ್ನೂರು ಕೆ.ರಾಜು ಅವರ ವೈವಿಧ್ಯಮಯ ಬರಹಗಳು ಕನ್ನಡ ಪ್ರಭ, ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ಸಂಜೆವಾಣಿ, ಉದಯವಾಣಿ, ವಿಜಯಕರ್ನಾಟಕ, ಮೈಸೂರು ಮಿತ್ರ, ವಿಜಯವಾಣಿ, ಈ ಸಂಜೆ, ಅಂದೋಲನ, ಪ್ರಜಾನುಡಿ, ಸುಧಾ, ತರಂಗ, ಕರ್ಮವೀರ, ಮಂಗಳ, ದಿ ಸಂಡೆ ಇಂಡಿಯನ್, ಹೊಸ ದಿಗಂತ, ಅರಗಿಣಿ, ಲಂಕೇಶ್, ಪ್ರಜಾಮತ, ಮಲ್ಲಿಗೆ, ಮಯೂರ, ತುಷಾರ, ಕಸ್ತೂರಿ, ಕರವೇ ನಲ್ನುಡಿ, ಪ್ರಿಯಾಂಕ, ವಿಜಯಚಿತ್ರ, ವನಿತಾ, ಗೃಹಶೋಭಾ, ಸ್ಪರ್ಧಾ ಜಗತ್ತು, ರೂಪತಾರಾ, ಗೈಡ್ ದಿಕ್ಸೂಚಿ, ಸ್ಪರ್ಧಾಚೈತ್ರ, ಸ್ಪರ್ಧಾ ಸ್ಫೂರ್ತಿ, ಜ್ಞಾನ ಶಂಕರ, ಮಂಜುವಾಣಿ, ಮುಂತಾದ ಬಹುತೇಕ ಎಲ್ಲಾ ಜನಪ್ರಿಯ ಪತ್ರಿಕೆಗಳಲ್ಲೂ ಪ್ರಕಟಗೊಂಡಿವೆ. ಇವತ್ತಿಗೂ ಪ್ರಕಟಗೊಳ್ಳುತ್ತಲೇ ಇವೆ. ಪ್ರತಿದಿನ ಯಾವುದಾದರೂ ಒಂದು ಪತ್ರಿಕೆಯಲ್ಲಿ ಇವರ ಬರಹ ಇದ್ದೇ ಇರುತ್ತದೆ. ಅಷ್ಟರ ಮಟ್ಟಿಗೆ ಇವರು ಬರವಣಿಗೆಯಲ್ಲಿ ಮುಳುಗಿದ್ದಾರೆ. == ಬನ್ನೂರು ಕೆ.ರಾಜು ಅವರ ಪ್ರಮುಖ ಕೃತಿಗಳು == == ಬನ್ನೂರು ಕೆ. ರಾಜು ಅವರಿಗೆ ಸಂದ ಪ್ರಶಸ್ತಿ/ಪುರಸ್ಕಾರ, ಸನ್ಮಾನಗಳು == ಅಮೆರಿಕನ್ ಬಯಾಗ್ರಫಿಕಲ್ ಇನ್‍ಸ್ಟಿಟ್ಯೂಟ್ (ಎಬಿಐ-ಯುಎಸ್‍ಎ)ನ 1999ನೇ ಸಾಲಿನ ಮ್ಯಾನ್ ಆಫ್ ದಿ ಇಯರ್ ಅಂತಾರಾಷ್ಟ್ರೀಯ ಪ್ರಶಸ್ತಿ, 1992ನೇ ಸಾಲಿನ ಭಾರತ ಸರ್ಕಾರದ ನೆಹರೂ ಯುವ ಕೇಂದ್ರದ ಶ್ರೇಷ್ಠ ಯುವಕ ಪ್ರಶಸ್ತಿ, 1994ರಲ್ಲಿ ಕರ್ನಾಟಕ ಸರ್ಕಾರದ ಬಹು ಭಾಷಾ ದಸರಾ ಕವಿ ಸಮ್ಮೇಳನದ ಆಹ್ವಾನಿತ ಕವಿಯ ವಿಶೇಷ ಪುರಸ್ಕಾರ, 1997ರಲ್ಲಿ ಶ್ರೀ ಭುವನೇಶ್ವರಿ ಕನ್ನಡ ಬಳಗದ ರಾಜ್ಯೋತ್ಸವ ಪ್ರಶಸ್ತಿ, 1990ರಲ್ಲಿ ಯುವ ಸಾಹಿತ್ಯ ರತ್ನ ಪ್ರಶಸ್ತಿ, 1993ರಲ್ಲಿ ಯುವ ಚೇತನ ಪ್ರಶಸ್ತಿ, 1994ರಲ್ಲಿ ಡಾ. ಕೆ. ಶಿವರಾಮ ಕಾರಂತ ಪ್ರಶಸ್ತಿ, 1999ರಲ್ಲಿ ವಸಂತ ಪ್ರಕಾಶನದ ದಶಮಾನೋತ್ಸವ ಪುರಸ್ಕಾರ, 2000ರಲ್ಲಿ ಮೈಸೂರು ರತ್ನ ಪ್ರಶಸ್ತಿ, 2001ರಲ್ಲಿ ಮಾದಿಗಹಳ್ಳಿಯ ಜೈ ಭುವನೇಶ್ವರಿ ಕನ್ನಡ ಯುವ ಮಿತ್ರ ಬಳಗದ ರಾಜ್ಯೋತ್ಸವ ಪುರಸ್ಕಾರ, 2002ರಲ್ಲಿ ಗಾಂಧಿವಾದಿ ಎಸ್. ನಂಜುಂಡಯ್ಯ ಪ್ರಶಸ್ತಿ, 2003ರಲ್ಲಿ ಶ್ರೀ ಬಸವೇಶ್ವರ ಸದ್ಭಾವನ ಪ್ರಶಸ್ತಿ, 2005ರಲ್ಲಿ ರಾಷ್ಟ್ರಕವಿ ಕುವೆಂಪು ಪ್ರಶಸ್ತಿ, 2012ರಲ್ಲಿ ಎಚ್ಚೆಸ್ಕೆ ಸಾಹಿತ್ಯ ಪ್ರಶಸ್ತಿ, 2014ರಲ್ಲಿ ವಿಶ್ವಮಾನ ಕುವೆಂಪು ಸಾಹಿತ್ಯ ರತ್ನ ಪ್ರಶಸ್ತಿಗಳು ಸೇರಿದಂತೆ ಅನೇಕ ಪ್ರಶಸ್ತಿ, ಪುರಸ್ಕಾರ, ಸನ್ಮಾನಗಳು ಇವರಿಗೆ ಸಂದಿವೆ. == ಉಲ್ಲೇಖಗಳು ==